Thursday, November 27, 2008

ಜನಪದ ಕಥಾಕಣಜ ಈರಬಡಪ್ಪ

ಚಿತ್ರದುರ್ಗ ಜಿಲ್ಲೆ ಜಾನಪದಕ್ಕೆ ಖನಿಜಭೂಮಿ ಈ ನೆಲದಲ್ಲಿ ನಾಡೋಜ ಸಿರಿಯಜ್ಜಿ, ಬಿದರಕೆರೆ ತೋಪಮ್ಮ, ಗಿಡ್ಡಜ್ಜ ಇವರೆಲ್ಲ ಈ ನೆಲದ ಜನಪದ ಪ್ರತಿಭಾಗಣಿಗಳು. ಈ ಸಾಲಿನಲ್ಲಿ ಈರಬಡಪ್ಪನವರೂ ಸೇರುತ್ತಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಈರಬಡಪ್ಪನವರ ಹುಟ್ಟೂರು. ಕುರುಬ ಸಮುದಾಯಕ್ಕೆ ಸೇರಿದ ಈರಬಡಪ್ಪ ತನ್ನ ಹಳ್ಳಿಯ ಎಲ್ಲಾ ಜೀವಸತ್ವದೊಂದಿಗೆ ಬೆಳೆದು ಬಂದು ಅತ್ಯುತ್ತಮ ಕಥೆಗಾರನಾಗಿ ಈ ಪರಿಸರದಲ್ಲಿ ಜನಜನಿತ ವ್ಯಕ್ತಿಯಾಗಿದ್ದಾರೆ. ಯಾವ ಹೊತ್ತಿನಲ್ಲೇ ಆಗಲಿ ಊರಿನ ಜನ ಬಡಜ್ಜ ಕಥೆ ಹೇಳು ಅಂದರೆ ಸಾಕು ಬೇಸರಿಸಿಕೊಳ್ಳದೇ ಸರಾಗವಾಗಿ ಕಥೆ ಹೇಳಲಿಕ್ಕೆ ಶುರು ಮಾಡಿಬಿಡುತ್ತಾರೆ. ಕೇಳುವವರೇ ಕೊನೆಗೆ ಸುಸ್ತಾಗಬೇಕು. ಅಷ್ಟೊಂದು ಕಥೆಗಳು ಇವರ ಕಣಜದೊಳಗೆ ತುಂಬಿಕೊಂಡಿವೆ. ಇವರ ಕಥೆಗಳು ವಸ್ತುವೈವಿದ್ಯದಿಂದ ಕೂಡಿದ್ದು, ಅದ್ಭುತ ರಮ್ಯಲೋಕವನ್ನು ತೆರೆದಿಡುತ್ತವೆ.

ಈರಬಡಪ್ಪನವರ ಕಥೆಗಳ ಬಗ್ಗೆ ನಾಡಿನ ಗಣ್ಯವಿದ್ವಾಂಸರು ಮೆಚ್ಚುಗೆಯ ನುಡಿಬಾಗಿನ ಕೊಟ್ಟಿದ್ದಾರೆ. ಡಾ. ಜೀ.ಶಂ. ಪರಮಶಿವಯ್ಯನವರು ಈರಬಡಪ್ಪನವರ ಕಥೆಗಳನ್ನು ಆಸ್ವಾಧಿಸಿ ಹೇಳಿದ್ದು ಹೀಗೆ, "ಈರಬಡಪ್ಪನ ಕಥೆಗಳಲ್ಲಿ ಬರುವ ವಿವರಗಳು ಕತೆಗಾರರ ಲೋಕಾನುಭವವನ್ನು ನಿರೂಪಣಾ ಸಾಮರ್ಥ್ಯವನ್ನು ಕಲಾತ್ಮಕ ಪ್ರತಿಭೆಯನ್ನು ಮೆರೆಯುತ್ತವೆ. ಪ್ರತಿಯೊಂದು ಸಂಧರ್ಭದಲ್ಲಿ ಸಮುಚಿತವಾದ ಸಂಭಾಷಣೆಯಿಂದ ಕಥೆಗೆ ಸ್ವಾರಸ್ಯವನ್ನು ತುಂಬಲಾಗುತ್ತದೆ. ಈತನ ಕಥೆಗಳಲ್ಲಿ ಯಥೇಚ್ಛವಾಗಿ ಕಂಡು ಬರುವ ವರ್ಣನೆಗಳಲ್ಲಿ ಒಳ್ಳೆಯ ಕವಿ ಪ್ರತಿಭೆ ಹಾಗೂ ಸೊಬಗ ಶೈಲಿಯನ್ನು ಕಂಡುಕೊಳ್ಳಬಹುದು." ಡಾ.ಹಿ.ಶಿ. ರಾಮಚಂದ್ರೇಗೌಡರು ಈರಬಡಪ್ಪನವರು ಹೇಳುವ ಕೆಲವು ನಿರ್ಧಿಷ್ಠ ಕತೆಗಳನ್ನು ಕುರಿತಂತೆ ಹೀಗೆ ಅಭಿಪ್ರಾಯಪಡುತ್ತಾರೆ. "ಕತೆಗಾರ ಈರಬಡಪ್ಪ ಹೇಳಿರುವ 'ಬಡಕುದುರೆ ಬಡಜ್ಜ' ಕತೆಯಲ್ಲಿ ಬಡಕುದುರೆ ಅವಸಾನ ಕರುಣಾಜನಕವಾಗಿದ್ದು, ಸಾಹಿತ್ಯಕ ಕಥೆಯೊಂದರ ಅಂತ್ಯದಂತೆ ಕಂಡುಬರುತ್ತದೆ. 'ಸಾವಿತ್ರಿಸ್ವಪ್ನ' ಕತೆ ಒಂದು ವಿಶಿಷ್ಟ ವಿನ್ಯಾಸ ಮತ್ತು ಭಾಷೆಯ ವಿಶೇಷ ತೊಡಗುವಿಕೆಯಲ್ಲಿ ಸೃಷ್ಠಿಯಾಗಿದೆ. ಕನ್ನಡದಲ್ಲಿ ಇದುವರೆಗೆ ದೊರೆತಿರುವ ಇತರ ಯಾವುದೇ ಪಾಠಬೇದಕ್ಕಿಂತ ಉತ್ತಮವೆನಿಸಿದೆ."

ದೇಸಿ ಕವಿ ಎಸ್.ಜಿ. ಸಿದ್ಧರಾಮಯ್ಯನವರು ಈರಬಡಪ್ಪನವರು ಹೇಳುವ ಕಥೆಗಳು ಹಾಗೂ ಕಥೆಗಾರನ ಆತ್ಮಕಥನವನ್ನು ಕುರಿತಂತೆ ಹೇಳಿರುವ ನುಡಿಗಳವು. "ಜನಪದ ಕಥಾಕಣಜವೆಂದರೆ, ಅದು ಬಹುಮುಖೀ ನೆಲೆಯೊಳಗೆ ಈ ನೆಲದ ಜೀವನ ಪರಂಪರೆಗಳನ್ನು ದ್ರವ್ಯವಾಗಿಸಿಕೊಂಡಿರುವ ಮೌಖಿಕ ಸಂಪದದ ನೆಲೆವೀಡು ನಮ್ಮ ಜನಪದರ ಎದೆಯಂಗಳ. ಈರಬಡಪ್ಪನವರ ಕಥೆಗಳನ್ನು ಕೇಳುತ್ತಾ ಹೋದರೆ ಹಲವು ವಿಸ್ಮಯಗಳು ತೆರೆದುಕೊಳ್ಳುತ್ತವೆ.

1986ರಲ್ಲಿ ಈರಬಡಪ್ಪನವರ ಕೆಲವು ಕತೆಗಳನ್ನು 'ಕಮರಹಳ್ಳಿಯ ಕಥೆಗಳು' ಎಂಬ ಶೀರ್ಷಿಕೆಯಲ್ಲಿ ಇದೇ ಲೇಖಕನಿಂದ ಸಂಪಾದನೆಗೊಂಡು ಕೃತಿ ಪ್ರಕಟವಾಗಿರುತ್ತದೆ. ಕೃತಿಯೊಳಗಿನ ಕತೆಗಳ ಅಂತಃಸತ್ವವನ್ನು ಮನಗಂಡ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದರಿ ಕೃತಿಗೆ 1988ರಲ್ಲಿ ಪುಸ್ತಕ ಬಹುಮಾನವನ್ನು ನೀಡಿತು. ನಂತರ 2001ರಲ್ಲಿ ಕಥಾಕಣಜ ಈರಬಡಪ್ಪನವರಿಗೂ ಪ್ರಶಸ್ತಿ ನೀಡಿ ಗೌರವಿಸಿತು. 2007ರಲ್ಲಿ ಕಥೆಗಾರರ ಮನದಾಳದ ಕನಸಗಳು ಹೃದಯದ ಭಾವಗಳ ಆತ್ಮಕಥನ ಈ ಲೇಖಕನಿಂದ ರೂಪುಗೊಂಡು ಕನ್ನಡ ಪುಸ್ತಕ ಪ್ರಾಧೀಕಾರದಿಂದ ಕೃತಿರೂಪದಲ್ಲಿ ಪ್ರಕಟಗೊಂಡಿತು.

ಈರಬಡಪ್ಪನವರ ಪ್ರತಿಭಾ ಸಂಪತ್ತನ್ನು ಗುರುತಿಸುತ್ತಿರುವ ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಈಚೆಗೆ ಮೈಸೂರಿನ ರಂಗಾಯಣ ಸಂಸ್ಥೆಗೆ ರಂಗಾಸಕ್ತರಿಗೆ ಕಥೆ ಹೇಳಿಸಿ ಗೌರವಿಸಿ ಸನ್ಮಾನ ಮಾಡಿದ್ದು ಒಂದು ವಿಶೇಷವಾಗಿತ್ತು. ಇದೀಗ ಕನ್ನಡ ಸಾಹಿತ್ಯ ಪರಿಷತ್ತು ಶ್ರೀಯುತರಿಗೆ ಪ್ರಶಸ್ತಿ ಘೋಷಿಸಿರುವುದು ಈರಬಡಪ್ಪನವರ ಕಥಾ ಪ್ರತಿಭೆಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ. ಇಂಥ ಅಪರೂಪದ ಪ್ರತಿಭೆಗಳ ಬಗ್ಗೆ ಸಾಹಿತಿ ಕಾ.ತ.ಚಿಕ್ಕಣ್ಣ ಜನಪದ ವಿದ್ವಾಂಸರಾದ ಡಾ.ಕಾಳೇಗೌಡ ನಾಗವಾರ, ಡಾ ಕೃಷ್ಣಮೂರ್ತಿ ಹನೂರು, ಡಾ ಮೀರಾಸಾಬಿಹಳ್ಳಿ ಶಿವಣ್ಣ ಇವರ ವಿಶೇಷ ಪ್ರೋತ್ಸಾಹ ಮತ್ತು ಅಗ್ಗಳಿಕೆಯನ್ನು ಈರಬಡಪ್ಪ ಪಡೆದುಕೊಂಡಿರುವುದು ಜನಪದ ಕಥಾ ಜಗತ್ತು ಜೀವಂತವಾಗಿರಲು ಸಹಕಾರಿಯಾದೀತು.

- ಉಪ್ಪಾರಹಟ್ಟಿ ಚಿತ್ತಯ್ಯ, ಚಳ್ಳಕೆರೆ.
+91 94485 67118

Sunday, November 2, 2008

ಚಿತ್ರದುರ್ಗ ಜಿಲ್ಲೆಯ ಕೈಗಾರಿಕಾ ಚಿತ್ರ

ಪೀಠಿಕೆ:
ಚಿತ್ರದುರ್ಗ ಜಿಲ್ಲೆಯು ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದ ಪ್ರದೇಶವಾದರೂ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಸಾಂಸ್ಕೃತಿಕ ಬೀಡಾಗಿದೆ. ಇತಿಹಾಸ ಪ್ರಸಿದ್ಧ ಕಲ್ಲಿನ ಕೋಟೆ, ಮುರುಘರಾಜೇಂದ್ರ ಬೃಹನ್ಮಠ, ವೀರವನಿತೆ ಒನಕೆ ಓಬವ್ವನ ಕಿಂಡಿ ಇತ್ಯಾದಿಗಳನ್ನೊಳಗೊಂಡ ಮೆದಕೇರಿನಾಯಕರಾಳಿದ ಐತಿಹಾಸಿಕ ನಗರ, ಅಲ್ಲದೇ ಜಿಲ್ಲೆಯಲ್ಲಿ ಹಾಲುರಾಮೇಶ್ವರ, ರಂಗನಾಥಸ್ವಾಮಿ ದೇವಾಲಯ, ಗುರುತಿಪ್ಪೇರುದ್ರಸ್ವಾಮಿ ದೇವಾಲಯಗಳು ಇತ್ಯಾದಿಗಳಿವೆ.

ಕೈಗಾರಿಕಾ ಮತ್ತು ಕೃಷಿ ದೃಷ್ಟಿಯಿಂದ ನೋಡುವುದಾದರೆ ಈ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ರೇಷ್ಮೆ ಸೀರೆ ನೇಯ್ಗೆಗೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಪ್ರಕೃತಿದತ್ತ ಸುಣ್ಣದಕಲ್ಲು, ಕಬ್ಬಿಣದ ಅದಿರು, ಮ್ಯಾಂಗನೀಸ್ ಇತ್ಯಾದಿ ವಿಫುಲ ಖನಿಜ ಸಂಪತ್ತುಗಳಲ್ಲದೇ, ಕೃಷಿ ಉತ್ಪನ್ನಗಳಾದ ಮೆಕ್ಕೆಜೋಳ, ರಾಗಿ, ಈರುಳ್ಳಿ, ತೆಂಗು, ಶೇಂಗಾ ಬೆಳೆಗಳಲ್ಲದೆ ಹಣ್ಣುಹಂಪಲು, ಸೂರ್ಯಕಾಂತಿ, ಅಡಿಕೆ, ದಾಳಿಂಬೆ, ಅಂಜೂರ, ಮುಂತಾದ ತೋಟಗಾರಿಕೆ ಬೆಳೆಗಳು ಸಮೃದ್ದಿಯಾಗಿವೆ. ಈ ಸಂಪನ್ಮೂಲಗಳನ್ನಾಧರಿಸಿದ ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇವು ಸ್ಥಾಪಿಸಲ್ಪಟ್ಟಿವೆ. ಜಿಲ್ಲೆಯಲ್ಲಿ ಕುಶಲಕರ್ಮಿಗಳು ಮಹಿಳಾ ಸ್ವಸಹಾಯ ಸಂಘದವರು ಗುಡಿ ಕೈಗಾರಿಕೆ ಮತ್ತು ಗುಂಪು ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಉತ್ಪಾದನೆಗೆಂದು ಗಾಳಿಯಂತ್ರಗಳು (wind mills)ಸ್ಥಾಪಿತವಾಗಿವೆ. ಆದಾಗ್ಯೂ ಕೈಗಾರಿಕಾಭಿವೃದ್ಧಿ ಮಂದಪ್ರಗತಿಯಲ್ಲಿದೆಯೆಂದು ಹೇಳಲೇಬೇಕಾಗಿದೆ.

ಜಿಲ್ಲೆಯ ಭೌಗೋಳಿಕ ಲಕ್ಷಣಗಳು
1998ರಲ್ಲಿ ಹೊಸ ಜಿಲ್ಲೆಗಳ ಉದಯದ ನಂತರ ಹೊಸ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ಎಂದು 6 ತಾಲ್ಲೂಕುಗಳನ್ನು ಹೊಂದಿದೆ. ಜಿಲ್ಲೆಯು ರಾಜ್ಯದ ಮಧ್ಯಭಾಗದಲ್ಲಿದೆ. ಚಿತ್ರದುರ್ಗ ಜಿಲ್ಲೆಯ ಒಟ್ಟು ವಿಸ್ತೀರ್ಣ 7,70,700 ಹೆಕ್ಟೇರ್ ಗಳಿದ್ದು, ಬಹುಭಾಗ ಮರಳು ಮಿಶ್ರಿತ ಕೆಂಪು ಮಣ್ಣಿನಿಂದ ಮತ್ತು ಕಪ್ಪು ಮಣ್ಣಿನಿಂದ ಕೂಡಿದೆ. 4,08,168 ಹೆಕ್ಟೇರ್ ಗಳ ಸಾಗುವಳಿ, 77,255 ಹೆಕ್ಟೇರುಗಳ ನೀರಾವರಿ ಕ್ಷೇತ್ರ ಹಾಗೂ 73,719 ಹೆಕ್ಟೇರುಗಳಲ್ಲಿ ಅರಣ್ಯ ಭೂಮಿಯಿದೆ.
ಜಿಲ್ಲೆಯ ಬಹುಭಾಗ ಬರಡಾಗಿದ್ದು ಹವಾಮಾನವು 35 ಡಿ.ಸೆ.ನಿಂದ 42 ಡಿ.ಸೆ.ನವರೆಗೆ ಉಷ್ಣಾಂಶ ಹೊಂದಿರುತ್ತದೆ. ಜಿಲ್ಲೆಯ ವಾರ್ಷಿಕ ಮಳೆ ಪ್ರಮಾಣವು 450 ಮಿ.ಮೀ. ನಿಂದ 468 ಮಿ.ಮೀ ಜಿಲ್ಲೆಯಲ್ಲಿ ಸರ್ವ ಋತುಮಾನದ ಏಕೈಕ ನದಿ ವೇದಾವತಿ ಹರಿಯುತ್ತಿದ್ದು, ನೀರಾವರಿಯಿಂದ ವಂಚಿತರಾಗಿ, ರೈತರು ಕೇವಲ ಮಳೆ ನೀರನ್ನು ಆಶ್ರಯಿಸಿದ್ದಾರೆ.

ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಕೃಷಿಕರು ಹಾಗೂ ತೋಟಗಾರರು ನಿರತರಾಗಿದ್ದು, ಇದರಿಂದ ಎಣ್ಣೆ ಮಿಲ್ ಗಳು ಸಾಕಷ್ಟು ಸಂಖ್ಯೆಯಲ್ಲಿವೆ. ತೆಂಗಿನ ಬೆಳೆಯನ್ನು ಅವಲಂಭಿಸಿ ತೆಂಗಿನ ನಾರಿನ ಹುರಿ, ಹಗ್ಗ ಉತ್ಪಾದಿಸುವ ಕೈಗಾರಿಕೆಗಳಿವೆ. ವಿಫುಲ ನೈಸರ್ಗಿಕ ಖನಿಜಗಳಿಂದ ಗಣಿಗಾರಿಕೆ ಚಟುವಟಿಕೆ ಕೇಂದ್ರೀಕೃತವಾಗಿದೆ. ಸುಣ್ಣದ ಕಲ್ಲುಗಳನ್ನು ಅವಲಂಭಿಸಿ ಸಿಮೆಂಟ್ ಕಾರ್ಖಾನೆಗಳಿವೆ.

ಸಂಪನ್ಮೂಲಗಳು:
ಜಿಲ್ಲೆಯ ಜನಸಂಖ್ಯೆಯ ಬಹುಬಾಗ ಕೃಷಿಯನ್ನು ಅವಲಂಬಿಸಿದೆ. ಭೂಮಿಯು ಫಲವತ್ತಾದ್ದರಿಂದ ಬೃಹತ್ ನೀರಾವರಿ ಯೋಜನೆ ಜಿಲ್ಲೆಯಲ್ಲಿ ಲಭ್ಯವಿಲ್ಲದಾಗ್ಯೂ ಮಳೆ ನೀರನ್ನು ಅವಲಂಬಿಸಿ ಉತ್ತಮ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸದರಿ ಪ್ರಮುಖ ಬೆಳೆಗಳ ಸರಾಸರಿ ವಾರ್ಷಿಕ ಇಳುವರಿ ಕೆಳಗಿನಂತಿದೆ.
ಬೆಳೆಗಳು ಇಳುವರಿ ( ಮೆ.ಟನ್ ಗಳಲ್ಲಿ )
ಮೆಕ್ಕೆಜೋಳ 115550
ಜೋಳ 38700
ಈರುಳ್ಳಿ 435125
ತೊಗರಿ 18250
ಕಡಲೆ 14150
ರಾಗಿ 61750
ಸೂರ್ಯಕಾಂತಿ 28350
ಶೇಂಗಾ 195000
ಅಲಸಂದಿ 15250

ತೋಟಗಾರಿಕೆ ಬೆಳೆಗಳನ್ನು ಸಮೃದ್ದಿಯಾಗಿ ಬೆಳೆಯಲಾಗುತ್ತಿದ್ದು ಅವುಗಳ ಸರಾಸರಿ ವಾರ್ಷಿಕ ಇಳುವರಿ ಈ ಕೆಳಗಿನಂತಿದೆ.
ತೆಂಗು 6095 ಲಕ್ಷ (ಸಂಖ್ಯೆ)
ಮಾವು 13516 ಮೆ. ಟನ್
ಅಂಜೂರ 8600 ಮೆ. ಟನ್
ಅಡಿಕೆ 46615 ಮೆ. ಟನ್
ದಾಳಿಂಬೆ 9825 ಮೆ. ಟನ್
ಪಪ್ಪಾಯಿ 25700 ಮೆ. ಟನ್

ಅಂತೆಯೇ ಹಿರಿಯೂರು ತಾಲ್ಲೂಕು ಹುಚ್ಚವ್ವನಹಳ್ಳಿಯಲ್ಲಿ ಆಹಾರ ಕೃಷಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾಗುತ್ತಿದೆ.
ಜಿಲ್ಲೆಯಲ್ಲಿ ಹಸು, ಎಮ್ಮೆ, ಕುರಿ, ಆಡು, ಕೋಳಿ, ಇತ್ಯಾದಿ ಜಾನುವಾರು ಮತ್ತು ಪಕ್ಷಿಗಳ ಸಂಖ್ಯೆ ಸಮೃದ್ದಿಯಾಗಿದೆ. ಇದರಿಂದ ಉಣ್ಣೆ ನೇಯ್ಗೆ ಕುಶಲಕರ್ಮಿಗಳು ಕಂಬಳಿ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಶಿವಮೊಗ್ಗ ಹಾಲು ಒಕ್ಕೂಟದಡಿಯಲ್ಲಿ ಜಿಲ್ಲೆಯಲ್ಲಿ ದಿನಂಪ್ರತಿ 3 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಶಿವಮೊಗ್ಗ ಹಾಲು ಒಕ್ಕೂಟದಿಂದ ಮಾರಾಟ ವ್ಯವಸ್ಥೆಯಾಗುತ್ತಿದೆ. ಬಹುಸಂಖ್ಯೆಯಲ್ಲಿ ಕೋಳಿ ಉದ್ಯಮ ಮತ್ತು ಕೋಳಿ ಆಹಾರ ತಯಾರಿಕಾ ಘಟಕಗಳಿವೆ.

ಜಿಲ್ಲೆಯಲ್ಲಿ 4066 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದ್ದು ವಾರ್ಷಿಕ ಬೆಳೆಯಲಾಗುತ್ತಿದ್ದು ವಾರ್ಷಿಕ 6000 ಮೆ. ಟನ್ ರೇಷ್ಮೆ ಗೂಡು ಉತ್ಪಾದನೆಯಾಗುತ್ತಿದೆ. ರೇಷ್ಮೆ ನೂಲು ಬಿಚ್ಚುವ ಘಟಕಗಳು, ರೇಷ್ಮೆ ಸೀರೆ ನೇಯ್ಗೆ ಘಟಕಗಳು ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿವೆ.

ಜಿಲ್ಲೆಯಲ್ಲಿ ಹೇರಳವಾದ ಮಾನವ ಸಂಪನ್ಮೂಲ ಲಭ್ಯವಿದೆ. ಇಂಜಿನಿಯರಿಂಗ್, ದಂತ ಮತ್ತು ವೈದ್ಯಕೀಯ ಕಾಲೇಜು, ಕೈಗಾರಿಕಾ ತರಬೇತಿ ಕೇಂದ್ರ, ವೃತ್ತಿ ಶಿಕ್ಷಣ ಸಂಸ್ಥೆ, ಪದವಿ ಕಾಲೇಜುಗಳು, ಪಾಲಿಟೆಕ್ನಿಕ್ ಸಂಸ್ಥೆಗಳು ಇತ್ಯಾದಿಗಳಿಂದ ಉತ್ತಮ ಶಿಕ್ಷಣ ಪಡೆದ ಪದವೀಧರರು, ತರಬೇತಿ ಪಡೆದವರು ಹೆಚ್ಚಾಗಿ ಹೊರಬರುತ್ತಿದ್ದಾರೆ. ಜೊತೆಗೆ ರುಡ್ ಸೆಟ್ (RUDSET) ಕುಶಲಕರ್ಮಿ ತರಬೇತಿ ಕೇಂದ್ರ, ನಿರ್ಮಿತಿ ಕೇಂದ್ರ ಇತ್ಯಾದಿಗಳಿಂದ ನುರಿತ ಕೆಲಸಗಾರರು ಲಭ್ಯರಿದ್ದಾರೆ.

ಮೂಲ ಸೌಕರ್ಯಗಳು:
ಜಿಲ್ಲೆಯಲ್ಲಿ 887 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, 486 ಕಿ.ಮೀ. ರಾಜ್ಯ ಹೆದ್ದಾರಿ ಇದೆ. ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಂ 4 ಹಿರಿಯೂರು - ಚಿತ್ರದುರ್ಗ ಮಾರ್ಗವಾಗಿ ಮತ್ತು ರಾ.ಹೆ. 13 ಚಿತ್ರದುರ್ಗ- ಹೊಳಲ್ಕೆರೆ ಮಾರ್ಗವಾಗಿ ಒಟ್ಟು 166 ಕಿ.ಮೀ. ಉದ್ದವಿದೆ. ಚಿತ್ರದುರ್ಗದಿಂದ ಚಿಕ್ಕಜಾಜೂರುವರೆಗೆ ಮುಖ್ಯ ರೈಲುಮಾರ್ಗಕ್ಕೆ ಸಂಪರ್ಕದ ಮತ್ತು ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಮಾರ್ಗವಾಗಿ ರಾಯದುರ್ಗಕ್ಕೆ ಸೇರುವ ಒಟ್ಟು 154 ಕಿ.ಮೀ. ಉದ್ದದ ಬ್ರಾಡ್ ಗೇಜ್ ರೈಲುಮಾರ್ಗವಿದೆ.

ಜಿಲ್ಲೆಯಲ್ಲಿ ಒಟ್ಟು 306 ಅಂಚೆಕಚೇರಿಗಳು, 45 ತಂತಿ ಕಚೇರಿಗಳು, 84 ದೂರವಾಣಿ ವಿನಿಮಯ ಕೇಂದ್ರಗಳಿದ್ದು, ಒಟ್ಟು 41813 ದೂರವಾಣಿಗಳಿವೆ. ಜಿಲ್ಲೆಯ 1245 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದ್ದು, ಬೆಸ್ಕಾಂ ಸಂಸ್ಥೆಯ ಎರಡು ವಿಭಾಗಗಳು ಚಿತ್ರದುರ್ಗ, ಹಿರಿಯೂರಿನಲ್ಲಿದ್ದು 220 ಮೆಗಾವ್ಯಾಟ್ ಸಾಮರ್ಥ್ಯ ವಿದ್ಯುತ್ (ಶರಾವತಿಯಿಂದ ಬರುವುದನ್ನು ಒಳತೆಗೆದುಕೊಳ್ಳುವ) ರಿಸೀವಿಂಗ್ ಸ್ಟೇಷನ್ ಹಿರಿಯೂರಿನಲ್ಲಿದೆ. ಪ್ರತಿ ತಾಲ್ಲೂಕಿನಲ್ಲಿ ಉಪ ಪ್ರಸರಣಾ ಕೇಂದ್ರಗಳಂತೆ ಒಟ್ಟು 37 ಕೇಂದ್ರಗಳಿವೆ. ಜಿಲ್ಲೆಯಲ್ಲಿ 200 ಗಾಳಿಯಂತ್ರಗಳಿಂದ 45 ಮೆ.ವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಜಿಲ್ಲೆಯಲ್ಲಿ 66 ವಾಣಿಜ್ಯ ಬ್ಯಾಂಕುಗಳ ಶಾಖೆಗಳಿದ್ದು, 63 ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಗಳಿವೆ. 8 ಜಿಲ್ಲಾ ಕೇಂದ್ರಿಯ ಸಹಕಾರಿ ಬ್ಯಾಂಕ್ ಶಾಖೆಗಳು ಮತ್ತು 6 ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಶಾಖೆಗಳಿವೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಒಂದು ಶಾಖಾ ಕಚೇರಿ ಚಿತ್ರದುರ್ಗದಲ್ಲಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ಕೈಗಾರಿಕಾಭಿವೃದ್ಧಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳ (ನೀರು, ರಸ್ತೆ, ವಿದ್ಯುತ್) ಒಟ್ಟು 3 ವಸಾಹತುಗಳನ್ನು ನಿರ್ಮಿಸಿದ್ದು, ಚಿತ್ರದುರ್ಗ, ಹಿರಿಯೂರು ಮತ್ತು ಹೊಸದುರ್ಗದಲ್ಲಿ ಸ್ಥಾಪಿತವಾಗಿದೆ. ಒಟ್ಟು 60 ಮಳಿಗೆಗಳನ್ನು ಮತ್ತು 153 ನಿವೇಶನಗಳನ್ನು ನಿರ್ಮಿಸಲಾಗಿದ್ದು, ಬಹುಭಾಗ ಹಂಚಿಕೆಯಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಚಿತ್ರದುರ್ಗ ಕೋಟೆಯಲ್ಲಿ 86 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, 87 ವಿವಿಧ ವಿಸ್ತೀರ್ಣಗಳ ನಿವೇಶನಗಳನ್ನು ನಿರ್ಮಿಸಿ ಬೇಡಿಕೆಯಂತೆ ಮಂಡಳಿಯು ಹೊಳಲ್ಕೆರೆ ರಸ್ತೆಯಲ್ಲಿ 50 ಎಕರೆ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಳಿಸಲು ಕಾರ್ಯೋನ್ಮುಖವಾಗಿದೆ.

ಹಾಲಿ ಅಸ್ತಿತ್ವದಲ್ಲಿರುವ ಕೈಗಾರಿಕೆಗಳು:
1. ಕುಶಲಕರ್ಮಿಗಳು:
ಜಿಲ್ಲೆಯಲ್ಲಿ 24 ವಿವಿಧ ಕಸುಬುಗಳಲ್ಲಿ 16600 ಗ್ರಾಮೀಣ ಕುಶಲಕರ್ಮಿಗಳಿದ್ದಾರೆ. ಹೆಚ್ಚಿನ ಸಂಖ್ಯೆಯ ಕಂಬಳಿ ನೇಕಾರರು, ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕಿನಲ್ಲಿದ್ದಾರೆ. ರೇಷ್ಮೆ ಸೀರೆ ನೇಕಾರರು ಮೊಳಕಾಲ್ಮೂರು, ಚಳ್ಳಕೆರೆಯಲ್ಲಿದ್ದಾರೆ. ಇನ್ನುಳಿದಂತೆ ಶಿಲ್ಪ ಕೆತ್ತನೆಗಾರರು ಹೊಳಲ್ಕೆರೆ ತಾಲ್ಲೂಕಿನ ನಾರಾಯಣಗೊಂಡನಹಳ್ಳಿಯಲ್ಲಿ, ಕಂಚಿನ ವಿಗ್ರಹ, ಹಿತ್ತಾಳೆ ಪ್ರಭಾವಳಿ ಕರಕುಶಲಕರ್ಮಿಗಳು ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು, ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಮತ್ತು ಇನ್ನುಳಿದಂತೆ ಬಡಗಿ, ಕಮ್ಮಾರರು, ಚಮ್ಮಾರರು, ಕುಂಬಾರರು, ಅಕ್ಕಸಾಲಿಗರು, ಹತ್ತಿ ನೇಯ್ಗೆ ನೇಕಾರರು, ತೆಂಗಿನ ನಾರಿನ ಕಸುಬುದಾರರು ಎಲ್ಲಾ ತಾಲ್ಲೂಕುಗಳಲ್ಲಿ ಇದ್ದಾರೆ.

2. ಇಲ್ಲಿಯವರೆಗೂ ಸ್ಥಾಪಿತವಾದ ಕೈಗಾರಿಕೆಗಳ ವರ್ಗೀಕರಣ:
ಆಹಾರ ಆಧಾರಿತ ಕೈಗಾರಿಕೆಗಳು, ಜವಳಿ ಆಧಾರಿತ ಕೈಗಾರಿಕೆಗಳು, ಮರ ಆಧಾರಿತ ಕೈಗಾರಿಕೆಗಳು, ಚರ್ಮ ಆಧಾರಿತ ಕೈಗಾರಿಕೆಗಳು, ಪ್ರಿಂಟಿಂಗ್ ಮತ್ತು ಸ್ಟೇಷನರಿ ಆಧಾರಿತ ಕೈಗಾರಿಕೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್ ಆಧಾರಿತ ಕೈಗಾರಿಕೆಗಳು, ಜನರಲ್ ಇಂಜಿನಿಯರಿಂಗ್ ಆಧಾರಿತ ಕೈಗಾರಿಕೆಗಳು, ಕೆಮಿಕಲ್ಸ್ ಆಧಾರಿತ ಕೈಗಾರಿಕೆಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಆಧಾರಿತ ಕೈಗಾರಿಕೆಗಳು, ಆಟೋಮೊಬೈಲ್ಸ್ ಆಧಾರಿತ ಕೈಗಾರಿಕೆಗಳು, ಫೆರಸ್ ಮತ್ತು ನಾನ್ ಫೆರಸ್ ಕೈಗಾರಿಕೆಗಳು, ಬೇಸಿಕ್ ಮೆಟಲ್ ಆಧಾರಿತ ಕೈಗಾರಿಕೆಗಳು, ಗ್ಲಾಸ್ ಮತ್ತು ಸೆರಾಮಿಕ್ಸ್ ಆಧಾರಿತ ಕೈಗಾರಿಕೆಗಳು, ಜಾಬ್ ವರ್ಕ್ ಆಧಾರಿತ ಕೈಗಾರಿಕೆಗಳು, ಮಿಸ್ ಲೇನಿಯಸ್ ಆಧಾರಿತ ಕೈಗಾರಿಕೆಗಳು, ಇತರೆ ಕೈಗಾರಿಕೆಗಳು.

ಜಿಲ್ಲೆಯ ಸ್ವಾಟ್ ಅನಾಲಿಸಿಸ್:
ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆ ಚಟುವಟಿಕೆ ಪ್ರಾರಂಭಿಸುವ ಮುನ್ನ ಜಿಲ್ಲೆಯ ಪ್ರಬಲ ಅಂಶಗಳು, ದುರ್ಬಲ ಅಂಶಗಳು, ಅವಕಾಶಗಳು ಹಾಗೂ ಅಪಾಯ ಅಂಶಗಳ ವಿಶ್ಲೇಷಣೆ ಅತ್ಯಾವಶ್ಯಕವಾಗಿರುತ್ತದೆ.
ಪ್ರಬಲತೆಗಳು (strength):
1. ರಾಷ್ಟ್ರೀಯ ಹೆದ್ದಾರಿ 4 ಮತ್ತು 13 ರಿಂದ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ
2. ಮುಖ್ಯವಾದ ಪ್ರವಾಸಿ ತಾಣ
3. ವಿಫುಲವಾದ ಕೃಷಿ ತೋಟಗಾರಿಕೆ ಬೆಳೆ ಉತ್ಪನ್ನ
4. ಎಲ್ಲಾ ಋತುಮಾನಗಳಲ್ಲಿ ಗಾಳಿವೇಗ ಸಮನಾದ್ದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಗಾಳಿಯಂತ್ರ (windmill) ಸ್ಥಾಪನೆಗೆ ಅವಕಾಶ.
5. ಜಿಲ್ಲೆಯ ಬಹಳ ಸಂಖ್ಯೆಯ ವಿದ್ಯಾಸಂಸ್ಥೆಗಳಾದ ಇಂಜಿನಿಯರಿಂಗ್, ಪದವಿ ಕಾಲೇಜು, ಡೆಂಟಲ್ ಕಾಲೇಜು, ಪಾಲಿಟೆಕ್ನಿಕ್, ಕೈಗಾರಿಕಾ ತರಬೇತಿ ಕೇಂದ್ರ, ವೃತ್ತಿಪರ ಶಿಕ್ಷಣ ಸಂಸ್ಥೆ, ನೈಪುಣ್ಯ ಹೆಚ್ಚಿಸುವ ರುಡ್ ಸೆಟ್, ಸ್ಟೆಪ್,

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ : ಸಂಕ್ಷಿಪ್ತ ಪರಿಚಯ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪರಂಪರೆಯಲ್ಲಿ 21ನೇ ಜಗದ್ಗುರುಗಳಾದ ಶ್ರೀಮದುಜ್ಜಯನಿ ಸದ್ಧರ್ಮ ಸಿಂಹಾಸನಧೀಶ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯಙ್ಞಾನ ಮತ್ತು ದೂರದೃಷ್ಠಿಯಿಂದ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ) (1962) ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ಅಭಿವೃದ್ಧಿ ಪಥದಲ್ಲಿದೆ.

ಮಾತೃಭಾಷೆಯಾದ ಕನ್ನಡ , ವೈದಿಕ ಭಾಷೆ ಸಂಸ್ಕೃತ,ಇಂಗ್ಲೀಷ್, ಜರ್ಮನ್ ಭಾಷೆಗಳ ಅಪಾರ ಪಾಂಡಿತ್ಯ ಹೊಂದಿರುವ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಠಿ ಮತ್ತು ಶ್ರಮದ ಫಲವಾಗಿ ಬೃಹನ್ಮಠ ಮತ್ತು ಸಂಸ್ಥೆ ಹಲವಾರು ಆಡಳಿತ್ಮಾಕ ಸುಧಾರಣೆಗಳನ್ನು ಹಲವು ವಿವಿಧ ಹಂತಗಳಲ್ಲಿ ಹಮ್ಮಿಕೊಂಡಿದೆ. ಗಣಕಯಂತ್ರ (computer) ದಲ್ಲಿ ಅದ್ಭುತ ಙ್ಞಾನವನ್ನು ಹೊಂದಿರುವ ಶ್ರೀಗಳು ಪಾಣಿನಿ ಅಷ್ಟಾಧ್ಯಾಯಿ ವ್ಯಾಕರಣವನ್ನು ತಂತ್ರಾಂಶದಲ್ಲಿ ನಿರ್ಮಿಸಿ, ಅಂತರ್ಜಾಲ ಸಹಾಯದಿಂದ ವಿಶ್ವವ್ಯಾಪಿ ಸಮಸ್ತರಿಗೂ ತಲುಪುವಂತೆ ಮಾಡಿರುವುದು ಒಂದು ಕ್ರಾಂತಿಯೇ ಸರಿ. ಹಲವಾರು ಅಂತರಾಷ್ಟ್ರೀಯ ವಿಚಾರಗೋಷ್ಟಿಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಸಂಸ್ಕೃತಿಯನ್ನು ಪ್ರಚುರಪಡಿಸಿದ್ದಾರೆ.

ಪರಮಪೂಜ್ಯ ಜಗದ್ಗುರುಗಳು ಪಟ್ಟಧರಿಸಿದ ಬೆಳ್ಳಿಹಬ್ಬದ ಸವಿನೆನಪಿಗಾಗಿಯೇ ಎಂಬಂತೆ ಅನುಭವ ಮಂಟಪದ ಆವರಣದಲ್ಲಿ ವಿಶಿಷ್ಟ ರೀತಿಯಲ್ಲಿ ನಿರ್ಮಾಣವಾಗುರಿವ 16 ಕೋಟಿ ರೂ.ಗಳ ವೆಚ್ಚದಲ್ಲಿ ಬೃಹತ್ ಕಟ್ಟಡಗಳು ಪರಮಪೂಜ್ಯ ಜಗದ್ಗುರುಗಳವರ ಕ್ರೀಯಶೀಲತೆಗೆ ಸಾಕ್ಷಿ. ಸದ್ಧರ್ಮ ನ್ಯಾಯಫೀಠ, ಕೃಷಿ, ಕಾನೂನು, ಲೆಕ್ಕ ಪರಿಶೋಧನೆ ಮತ್ತು ಹಾಸ್ಟೆಲ್ ಎಂಬ ವಿವಿಧ ರೀತಿಯ ಸಮಿತಿಗಳ ಕಾರ್ಯನಿರ್ವಹಣೆ ಪರಿಣಾಮಕಾರಿಯಾಗಿ ಆಗುತ್ತಿದೆ. ಶ್ರೀಗಳು ರಂಗಕಲೆಗೆ ನೀಡುತ್ತಿರುವ ಪ್ರೋತ್ಸಹ ಅಪಾರ ಹಾಗು ಅನನ್ಯ.

ಸದ್ಧರ್ಮ ನ್ಯಾಯಪೀಠ :
ಆರು ವರ್ಷಗಳ ಹಿಂದೆ ಪ್ರಾರಂಭವಾದ ಸದ್ಧರ್ಮ ನ್ಯಾಯಪೀಠ ಇಂದು ಹಿರಿಯ ತರಳಬಾಳು ಜಗದ್ಗುರುಗಳ ಸಂಸ್ಮರಣಾರ್ಥಕವಾಗಿ ಕಟ್ಟಿದ ವಿದ್ಯಾರ್ಥನಿಲಯದ ಕಟ್ಟಡದ 3ನೇ ಮಹಡಿಯಲ್ಲಿ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ಪ್ರತಿ ಸೋಮವಾರ ನಡೆಯುತ್ತದೆ. ಈ ಸಭೆ ಬೆಳಿಗ್ಗೆ 10.00 ಯಿಂದ ರಾತ್ರಿ 9.00 ಘಂಟೆಯವರೆಗೂ ನಡೆಯುತ್ತಿರುವುದು ಸರ್ವೆ ಸಾಮಾನ್ಯ ದೃಷ್ಯವಾಗಿದೆ. ಸರ್ವ ಸಮ್ಮತವಾದ ನ್ಯಾಯ ಭಕ್ತರಿಗೆ ಯಾವದೇ ಹಣ ಮತ್ತು ಕಾಲದ ವ್ಯಯವಿಲ್ಲದೆ ದೊರೆಯುತ್ತಿರುವುದು ಇಲ್ಲಿನ ವಿಶೇಷ. ಒಂದು ಅಂದಾಜಿನ ಪ್ರಕಾರ 400 -500 ಜನದರ್ಶನ ಮತ್ತು ಆಶಿರ್ವಾದ ಪಡೆಯುವರು.
ರಂಗ ಕಲೆ:
ಹಿರಿಯ ತರಳಬಾಳು ಜಗದ್ಗುರುಗಳವರ ಕಾಲದಿಂದ ನಡೆದು ಬರುತ್ತಿರುವ ವಚನ ಸಾಹಿತ್ಯದ ಮುದ್ರಣ ಮತ್ತು ಪ್ರಚಾರ ಕಾರ್ಯ ಇಂದು ರಂಗಕಲೆಯ ಮೂಲಕ ತನ್ನ ಸಾದನೆಯಲ್ಲಿ ಹಿರಿಮೆಯನ್ನು ಸಾಧನೆಯಲ್ಲಿ ಹಿರಿಮೆಯನ್ನು ಸಾಧಿಸುತ್ತಿದೆ. ಇದು ಮಾತ್ರವಲ್ಲದೆ ಹಿರಿಯ ತರಳಬಾಳು ಜಗದ್ಗುರು ಲಿಂ ಶ್ರೀ ಶಿವಕುಮಾರ ಶಿವಾಚಾರ್ಯರು ಮಹಾಸ್ವಾಮಿಗಳವರ ಕಲಾಭಿಮಾನಕ್ಕೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ.

ಸ್ವತಃ ನಾಟಕ ರಚಿಸಿ, ನಿರ್ದೇಶಿಸಿ ನಾಟಕಗಳನ್ನು ಪ್ರೋತ್ಸಹಿಸಿದ ಹಿರಿಯ ಶ್ರೀಗಳ ಪರಂಪರೆಯಲ್ಲಿ ಇಂದಿನ ಪರಮಪೂಜ್ಯ ಜಗದ್ಗುರುಗಳವರು ಮುಂದುವರೆದಿದ್ದಾರೆ ಎನ್ನುವುದು ಕಲಾರಂಗಕ್ಕೆ ಸಂದ ಗೌರವ. ಇಂದು ಸಿರಿಗೆರೆಯ ತರಳಬಾಳು ಕಲಾ ಸಂಘ ಬೇಸಿಗೆ ಕಾಲದ ರಜಾದಿನಗಳಲ್ಲಿ ರಂಗಾಸಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನಡೆಸುವ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿದೆ.

ಸಾಣೆಹಳ್ಳಿ ಶ್ರೀ ಮಠದ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮಿಗಳವರು ಸಹ ರಂಗಕಲೆಯನ್ನು ಪೋಷಿಸುತ್ತ ಬಂದಿರುತ್ತಾರೆ. ಈ ದೆಸೆಯಲ್ಲಿ 25 ಲಕ್ಷಕ್ಕೂ ಹೆಚ್ಚಿನ ಹಣದಲ್ಲಿ ರಂಗಮಂದಿರವನ್ನು ನಿರ್ಮಿಸಿರುವುದು ಹಾಗು ಬಯಲು ರಂಗಮಂದಿರವನ್ನು ಈಗಾಗಲೆ ಹೊಂದಿರುವುದು ಸಾಕ್ಷಿಯಾಗಿದೆ. ಸಾಣಿಹಳ್ಳಿಯು ಶ್ರೀ ಶಿವಕುಮಾರ ಸ್ವಾಮಿ ಕಲಾ ಸಂಘ (ರಿ) ಎಂಬ ಸಂಸ್ಥೆ ಆಶ್ರಯದಲ್ಲಿ ಕಲಾ ಸೇವೆ ನಡೆಯುತ್ತದೆ. 11ನೇ ಪಾದರ್ಪಣೆ ಮಾಡಿರುವ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘ ಕೈಗೊಂಡಿರುವ ಶಿವ ಸಂಚಾರ ದ ಸಾಧನೆ ಒಂದು ರಚನಾತ್ಮಕ ಕಾರ್ಯವಾಗಿದೆ. ಜನರ ಮನ್ನಣೆ ಪಡೆಯುವಲ್ಲಿ ಈ ಕಲಾ ಸಂಘ ಯಶಸ್ವಿಯಾಗಿದೆ. ಪೂಜ್ಯ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳವರಿಗೆ ದೊರೆತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ - 2004 ಶ್ರೀ ತರಳಬಾಳು ಕಲಾ ಸಂಘಕ್ಕೆ ಸಂದ ಗೌರವವಾಗಿದೆ.

ಬೃಹನ್ಮಠ ಮತ್ತು ವಿದಸ್ಯಾಸಂಸ್ಥೆಯ ಕಾರ್ಯಗಳು ಸುಗುಮವಾಗಿ ಹಾಗು ಹೆಚ್ಚು ಪರಿಣಾಮಕಾರಿಯಾಗಿ ನಡೆಯುವಂತೆ ಮಾಡಲು ಪರಮಾ ಪೂಜ್ಯರಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೃಷಿಸಮಿತಿ, ಕಟ್ಟಡ ಸಮಿತಿ, ಲೆಕ್ಕ ಪರಿಶೋಧನ ಸಮಿತಿ, ಹಾಸ್ಟೆಲ್ ಸಮಿತಿ, ಕಾನೂನು ಸಮಿತಿ, ಗ್ರಂಥ ಪ್ರಕಟಣ ಸಮಿತಿ ಎಂಬ ಆರು ಪ್ರಮುಖ ಸಮಿತಿಗಳನ್ನು ವಿವರವಾಗಿ ಆದೇಶಿಸಿದ್ದಾರೆ.

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿನ 77 ಪ್ರೌಢಶಾಲೆ,15 ಪದವಿ ಪೂರ್ವ ಕಾಲೇಜುಗಳು, 5 ಪದವಿ ಕಾಲೇಜುಗಳು, ಒಂದು ಬಿ.ಇಡಿ. ಕಾಲೇಜು ಮತ್ತು ಇಂಜನೀಯರಿಂಗ್ ಕಾಲೇಜುಗಳು, 4 ಸಂಸ್ಕೃತ ಪಾಠಶಾಲೆಗಳು, 9 ನರ್ಸರಿ ಶಾಲೆಗಳು, 9 ಪ್ರಾಥಮಿಕ ಶಾಲೆಗಳು, ಒಂದು ಅಂಗನವಾಡಿ ತರಬೇತಿ ಸಂಸ್ಥೆ, 2 ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು, 8 ಅನಾಥ ಮಕ್ಕಳ ಕುಟಿರ ಹಾಗು 40 ವಿದ್ಯಾರ್ಥಿ ನಿಲಯಗಳು. 175 ವಿದ್ಯಾ ಸಂಸ್ಥೆಗಳ ಆಡಳಿತ ನಿರ್ವಹಣೆಗಾಗಿ 8 ಜಿಲ್ಲೆಗಳಲ್ಲಿ ಹಂಚಿಹೋಗಿರುವ ಶಾಲಾ ಕಾಲೇಜುಗಳನ್ನು 10 ಪ್ರಾಂತ್ಯಗಳಾಗಿ ವಿಂಗಢಿಸಲಾಗಿದೆ. ಪ್ರತಿ ವಲಯದ ಮುಖ್ಯಸ್ಥರು ತಮ್ಮ ವಲಯದ ಒಳಗೆ ಬರುವ ಶಾಲಾ ಕಾಲೇಜುಗಳಿಗೆ ಸಂಬಂಧಿಸಿದ ಪತ್ರಗಳು, ಲೆಕ್ಕ ಪತ್ರ, ಇಂಡೆಂಟ್, ಬಡ್ತಿ, ವಾರ್ಷಿಕ ಬಡ್ತಿ, ಮುಂತಾದ ಪತ್ರಗಳನ್ನು ಪ್ರತಿ ಮಂಗಳವಾರ ಕೇಂದ್ರ ಕಛೇರಿ ಇರುವ ಸಿರಿಗೆರೆಯಲ್ಲಿ ಹಾಜರಾಗುವರು.

ಮುರುಘರಾಜೆಂದ್ರ ಮಠ


ಮುರುಘರಾಜೆಂದ್ರ ಮಠ

ಚಿತ್ರದುರ್ಗವನ್ನಾಳಿದ ಪ್ರಸಿದ್ದ ಪಾಳೆಯಗಾರರಲ್ಲಿ “ಬಿಚ್ಚುಗತ್ತಿ ಭರಮಣ್ಣನಾಯಕ”ನೂ ಒಬ್ಬ. ಕ್ರಿ.ಶ.1689 ರಿಂದ 1721 ರವರೆಗೆ ಆಳ್ವಿಕೆ “ಮುಂದೇ ನೀನು ಚಿತ್ರದುರ್ಗದ ರಾಜನಾಗುತ್ತಿಯೆಂದು”. ಚಿತ್ರದುರ್ಗದ ಬೃಹನ್ಮಠದ ಪರಂಪರೆಯಲ್ಲಿನ ಎಂಟನೇ ಪಟ್ಟಾಧಿಕಾರಿಗಳಾಗಿದ್ದ ಮುರಿಘೇಂದ್ರ ರಾಜೇಂದ್ರರು (ಕ್ರಿ.ಶ.1640-1710) ಆರ್ಶೀವಾದ ಮಾಡಿದರಂತೆ. ನಂತರದಲ್ಲಿ ಪ್ರವಾಸದಿಂದ ಮರಳಿ ಬರುವ ವೇಳೆಗೆ, ಭರಮಣ್ಣನಾಯಕನ ಚಿತ್ರದುರ್ಗದ ರಾಜನಾಗಿದ್ದ. ಪ್ರವಾಸದಿಂದ ಹಿಂದಿರುಗಿದ ತಮ್ಮ ಗುರುಗಳನ್ನು ಕಂಡು ಹರ್ಷಿತಗೊಂಡ ಅವನು ತುಂಬುಮನಸ್ಸಿನಿಂದ ಗುರುಗಳನ್ನು ಸ್ವಾಗತಿಸಿದ. ತನ್ನ ಭಕ್ತಿಯ ಕಾಣಿಕೆಯೆಂಬಂತೆ ಬೆಟ್ಟದ ಮೇಲಿರುವ ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿ 360 ಅಂಕಣಗಳ ವಿಸ್ತಾರವಾದ ದೊಡ್ಡಮಠವೊಂದನ್ನು ಕಟ್ಟಿಸಿಕೊಟ್ಟ. ಅನಂತರ ಬೆಟ್ಟದಿಂದ ದೂರದಲ್ಲಿರುವ ಸ್ಥಳದಲ್ಲಿ ಇನ್ನೊಂದು ಮಠವನ್ನು ನಿರ್ಮಿಸಿದ. ಮಠಕ್ಕೆ ಅವನು ಅರ್ಪಿಸಿದ ವಸ್ತುಗಳಲ್ಲಿ ಗಂಟೆಯೂ ಒಂದು. ಅದರಲ್ಲಿ ಅವರ ಹೆಸರಿದೆ. ಹೀಗಾಗಿ ಶ್ರೀ ಮುರಿಗೇಂದ್ರ ರಾಜೇಂದ್ರರೇ ಈ ಪೀಠದ ಮೂಲ ಸ್ಥಾಪಕರಾಗಿದ್ದಾರೆ. ಈಗ ಬೆಟ್ಟದ ಮೇಲಿರುವ ಮಠ ಬಳಕೆಯಲ್ಲಿದೇ ಕೇವಲ ಒಂದು ಸ್ಮಾರಕವಾಗಿದೆ.



ಈಗಿರುವ ಮುರುಘಾಮಠವು ಚಿತ್ರದುರ್ಗ-ದಾವಣಗೆರೆ ಹೆದ್ದಾರಿಯಲ್ಲಿ ಚಿತ್ರದುರ್ಗದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಈ ಮಠ ಕ್ರಿ.ಶ. 1703ರ ಸುಮಾರಿನಲ್ಲಿ ನಿರ್ಮಾಣವಾಗಿರಬಹುದೆಂದು ಭಾವಿಸಲಾಗಿದೆ. ವಿಶಾಲವಾದ ಸ್ಥಳದಲ್ಲಿ ಭವ್ಯವಾದ ಅರಮನೆಯನ್ನು ಹೋಲುವಂತಹ ಕಟ್ಟಡವನ್ನು ಹೊಂದಿರುವ ಈ ಬೃಹನ್ಮಠ ಸ್ಥಾಪನೆಯಾದಗಿನಿಂದ ಪಾಳೆಯಗಾರರಿಂದ ಇನ್ನಿತರ ಸಂಸ್ಥಾನಗಳವರಿಂದ ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರಿಂದ ಗೌರವಾದರಗಳು ಸಲ್ಲುತ್ತಲೇ ಬಂದಿವೆ. ಈಗಿನ ಪಟ್ಟಾಧಿಕಾರಿಗಳಾದ ಶ್ರೀ ಶಿವಮೂರ್ತಿ ಸ್ವಾಮಿಗಳವರ ಆಶ್ರಯದಲ್ಲಿ ಅನೇಕ ವಿದ್ಯಾಸಂಸ್ಥೆಗಳು ನಡೆಯುತ್ತಿವೆ.


ಸಾಮಾಜಿಕ ಕ್ಷೇತ್ರದಲ್ಲಿ ಮುರುಘಾ ಮಠ:
· ಜನರ ಸಂಕಷ್ಟಗಳಿಗೆ ಬೃಹನ್ಮಠವು ಸದಾ ಮಿಡಿಯುತ್ತ ಬಂದಿದೆ. ಭೀಕರ ಬರಗಾಲ ಬಿದ್ದಾಗ ಗಂಜಿಕೇಂದ್ರಗಳನ್ನು ಸ್ಥಾಪಿಸಿ ಅನೇಕರ ಪ್ರಾಣ ಉಳಿಸಿದೆ.
· ಬಡವಿದ್ಯಾರ್ಥಿಗಳಿಗಾಗಿ ಹಲವೆಡೆ ಉಚಿತ ಪ್ರಸಾದ ನಿಲಯಗಳನ್ನು ತೆರೆದಿದೆ.
· ಕೋಮು ಗಲಭೆಯಲ್ಲಿ ನೊಂದವರಿಗೆ ಸಾಂತ್ವನ ನೀಡಿದೆ.
· ಆಶ್ರಯವಿಲ್ಲದ ಬಡವರಿಗೆ, ಹಿಂದುಳಿದವರಿಗೆ ಹಾಗೂ ದಲಿತರಿಗೆ ಮಠವು ನಿವೇಶನಗಳನ್ನಾಗಿ ಮಾಡಿ, ಉಚಿತವಾಗಿ ಹಂಚಿದೆ.
· ಹಲವು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳು ಮತ್ತು ಶ್ರೀಮಠಕ್ಕೆ ಪರಸ್ಥಳಗಳಿಂದ ಬಂದು ಹೋಗುವ ಜನರಿಗೆ ನಿತ್ಯದಾಸೋಹ.
ಹೀಗೆ ಹತ್ತು ಕೆಲವು ಜನಪರ ಕಾರ್ಯಗಳೊಂದಿಗೆ ಈ ಬೃಹನ್ಮಠವು ಆಧ್ಯಾತ್ಮಿಕದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದೆ.

ಶಿಕ್ಷಣ ಕ್ಷೇತ್ರದಲ್ಲಿ ಮುರುಘಾ ಮಠ:
“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಎಂಬ ಬಸವಣ್ಣನವರ ವಾಣಿಯಂತೆ ಶಿಕ್ಷಣ ಪ್ರಸಾರವೇ ಸಮಾಜದ ಏಳಿಗೆಗೆ ಕಾರಣವೆಂಬುದನ್ನು ಬೃಹನ್ಮಠ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ.
ಕರ್ನಾಟಕದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಶಾಲಾ ಕಾಲೇಜುಗಳು, ಪ್ರಸಾದ ನಿಲಯಗಳು ಇವನ್ನು ನಡೆಸುತ್ತಿರುವ ಕೆಲವೇ ಧಾರ್ಮಿಕ ಸಂಸ್ಥೆಗಳಲ್ಲಿ ಬೃಹನ್ಮಠವೂ ಒಂದಾಗಿದೆ. ಇದರ ಒಂದು ಅಂಗಸಂಸ್ಥೆಯಾದ ‘ಎಸ್.ಜೆ.ಎಂ. ವಿದ್ಯಾಪೀಠ’ವು ಶಿಶುವಿಹಾರಗಳು, ಪ್ರಾಥಮಿಕ-ಮಾಧ್ಯಮಿಕ-ಪ್ರೌಢಶಾಲೆಗಳು ಪದವಿಪೂರ್ವ ಮತ್ತು ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಲಲಿತಕಲಾ ಪದವಿ ಕಾಲೇಜುಗಳು; ಚಿತ್ರಕಲಾ, ಶುಶ್ರೂಷೆ ಮತ್ತಿತರ ವೃತ್ತಿ ಶಿಕ್ಷಣದ ವಿವಿಧ ವಿದ್ಯಾಲಯಗಳು; ತಂತ್ರಜ್ಞಾನ, ದಂತವೈದ್ಯಕೀಯ, ಔಷಧಿ ವಿಜ್ಞಾನ ಮಹಾವಿದ್ಯಾಲಯಗಳು; ಅಂಗವಿಕಲ ಮಕ್ಕಳ ವಸತಿಯುತ ಶಾಲೆಗಳು, ಈ ಮುಂತಾದುವುಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ವಿದ್ಯಾಪೀಠದ ವಿವಿಧ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಸುಮಾರು ಮುಕ್ಕಾಲು ಪಾಲು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಎಂಬುದು ಗಮನಾರ್ಹ ಸಂಗತಿ. ಬೃಹನ್ಮಠವು ಹೀಗೆ ಕೇವಲ ಧಾರ್ಮಿಕ ಸಂಸ್ಥೆಯಾಗಷ್ಟೆ ಉಳಿಯದೇ, ಶಿಕ್ಷಣ ಕ್ಷೇತ್ರದಲ್ಲೂ ವಿಶಿಷ್ಟ ಸೇವೆಯನ್ನು ಸಲ್ಲಿಸಿದೆ ಮತ್ತು ಈಗಲೂ ಸಲ್ಲಿಸುತ್ತದೆ.

ಕರ್ನಾಟಕ ಕಲಾಶ್ರೀ ವಿದ್ವಾನ್ ಬಿ.ಗುರುಸಿದ್ದಪ್ಪ

ಚಾರಿತ್ರಿಕ ಚಿತ್ರದುರ್ಗ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗ್ಗೆ ಸಾಕಷ್ಟು ತಿಳಿದಿರುವ ಕೆಲವೇ ಜನರಲ್ಲಿ ಹಿರಿಯ ಸಂಗೀತ ವಿದ್ವಾಂಸರಾದ ಶ್ರೀ ಬಿ.ಗುರುಸಿದ್ದಪ್ಪವರೂ ಒಬ್ಬರು. ಚಳ್ಳಕೆರೆ ತಾಲ್ಲೂಕಿನ ನಾಗಗೊಂಡನಹಳ್ಳಿಯ ಕೃಷಿಕ ದಂಪತಿಗಳಾದ ಶ್ರೀ ಬಸಪ್ಪ ಮತ್ತು ಶ್ರೀಮತಿ ರುದ್ರಮ್ಮ ದಂಪತಿಗಳ ಮಗನಾಗಿ ಜನಿಸಿದ ಗುರುಸಿದ್ದಪ್ಪನವರಿಗೆ ಬಾಲ್ಯದಿಂದಲೆ ಕಲೆಯ ಗೀಳು. ಸಂಗೀತ ಕಲಿಯುವ ಹುಚ್ಚು. ಹಿರಿಯರಾದ ಶ್ರೀ ಬಿ.ಪಿ.ಮಲ್ಲರೆಡ್ಡಿಯವರಲ್ಲಿ ಸಂಗೀತಾಬ್ಯಾಸ ಮಾಡಿದ ಗುರುಸಿದ್ದಪ್ಪನವರು, ನಾಟಕ ರಂಗದಲ್ಲಿ ಅಭಿರುಚಿ ಬೆಳಿಸಿಕೊಂಡರು. ಜೊತೆಗೆ ತಬಲ, ಮೃದಂಗ, ಹಾರಮೋನಿಯಂ ಮತ್ತು ಪಿಟೀಲು ವಾದ್ಯವಾದನಗಳಲ್ಲೂ ತರಬೇತಿ ಪಡೆದರು. ಇವುಗಳೊಂದಿಗೆ ಎಂ.ಎ. ಪದವಿಯನ್ನುಗಳಿಸಿ ಶಿಕ್ಷಕರಾಗಿ ಸರ್ಕಾರಿ ವೃತ್ತಿಯಲ್ಲಿ ತೊಡಗಿಸಿಕೊಂಡರು.

ರಂಗಭೂಮಿಯ ನಿರಂತರ ಸಂರ್ಪಕವಿಟ್ಟುಕೊಂಡ ಇವರು ನಾಟಕ ನಿರ್ದೇಶನ, ಸಂಗೀತ ಸಂಯೋಜನೆ ಹಾಗು ಪಾತ್ರ ನಿರ್ವಹಣೆಯಲ್ಲೂ ಎತ್ತಿದ ಕೈ . ತ್ಯಾಗ, ಭಕ್ತ ಸುಧನ್ವ, ಗ್ರಾಮ ಸುಧಾರಣೆ, ಝಾನ್ಸಿರಾಣಿ, ರಾಷ್ಟ್ರಪ್ರೇಮ, ಅಪೂರ್ವ ಮಿತ್ರರು , ಹಣೆ ಬರಹ ಹೀಗೆ ಹಲವಾರು ನಾಟಕಗಳನ್ನು ಸ್ವತಃ ರಚಿಸಿ ರಂಗ ಪ್ರದರ್ಶನಗೊಳಿಸಿದರು. ಶ್ರೀ ಗುರು ಕಲಾವೃಂದ ವೆಂಬ ತಂಡ ರೂಪಿಸಿ. ಆಂಧ್ರ ಕರ್ನಾಟಕ ರಾಜ್ಯಗಳ ಗ್ರಾಮಾಂತಾರ ಭಾಗಗಳಲ್ಲೂ ನಾಟಕ ಪ್ರದರ್ಶಿಸಿ ಮೆಚ್ಚುಗೆ ಪಡೆದವರು. ಕರ್ನಾಟಕ ಶಾಸ್ತ್ರಿಯ ಸಂಗೀತ ತರಬೇತಿಯನ್ನು ಚಳ್ಳಕೆರೆಯಲ್ಲಿ ನೀಡಲು ಪ್ರಾರಭಿಸಿದರು. ಕಥಾ ಕೀರ್ತನೆಯಲ್ಲೂ ಪಾಂಡಿತ್ಯ ಹೊಂದಿರುವ ಶ್ರೀಯುತರು ಕೀರ್ತನಾ ಕ್ಷೇತ್ರದಲ್ಲೂ ತಮ್ಮದೇ ಆದ ವಿಶೇಷತೆ ಮೆರೆದಿದ್ದಾರೆ. 1950 ರಿಂದಲೂ ಶಿಕ್ಷಣ ,ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿಕಟ ಸಂಪರ್ಕವನ್ನು ಹೊಂದಿರುವ ಗುರುಸಿದ್ದಪ್ಪನವರ ಶಿಷ್ಯರು ಇಂದು ಈ ಎಲ್ಲಾ ಕ್ಷೇತ್ರಗಳಲ್ಲೂ ಇದ್ದಾರೆ. ವೃತ್ತಿ ಮತ್ತು ಪ್ರವೃತ್ತಿ ಗಳೆರಡರಲ್ಲೂ ಜೇಷ್ಟತೆ ಮತ್ತು ಶ್ರೇಷ್ಟತೆಯನ್ನು ಕಾಪಡಿಕೊಂಡು ಬಂದಿರುವ ಈ ಹಿರಿಯ ಗುರುಗಳು 80ರ ಈ ಇಳಿವಯಸ್ಸಿನಲ್ಲೂ ಚಳ್ಳಕೆರೆಯ ತ್ಯಾಗರಾಜ ನಗರ ಬಡಾವಣೆ ತಮ್ಮ ನಿವಾಸದಲ್ಲಿ ಈಗಲೂ ಬರುವ ಉತ್ಸಾಹಿಗಳಿಗೆ ಸಂಗೀತ ವಾದ್ಯವಾದನಗಳ ತರಬೇತಿ ನೀಡುತಿದ್ದಾರೆ.
ಲೇಖಕರು: ಯು.ಎಸ್.ವಿಷ್ಣುಮೂರ್ತಿರಾವ್ (ಸಾಹಿತಿಗಳು ಹಾಗು ಪತ್ರಕರ್ತರು)

ಬಯಲು ಸೀಮೆ ಗಾಂಧಿಗೆ ಗೌರವ ಡಾಕ್ಟರೇಟ್

ಬೆಳಗೆರೆ ಕೃಷ್ಣಶಾಸ್ತ್ರಿಯೆಂದೊಡನೆ ನಮ್ಮ ಸೀಮೆಯ ಜನಮನಗಳಲ್ಲಿ ಥಟ್ಟನೆ ಮೂಡುವ ಚಿತ್ರ; ನಿಷ್ಕಲ್ಮಷ ನಗುವಿನ ಶ್ವೇತಧಾರಿಯಾದ ತೊಂಬತ್ತರ ಯುವಕನ ಚಿತ್ರ ! ತಮ್ಮ ಈ ಇಳಿವಯಸ್ಸಿನಲ್ಲಿಯೂ ಪಾದರಸದಂತೆ ಓಡಾಡಿಕೊಂಡು ಸಾಮಾಜಿಕ, ಆಧ್ಯಾತ್ಮಿಕ, ಜಾನಪದ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಶಾಸ್ತ್ರಿಗಳು ಇಂದಿನ ಯುವಕರಿಗೆ ಆದರ್ಶಪ್ರಾಯರು.


ಬೆಳಗೆರೆ ಕೃಷ್ಣಶಾಸ್ತ್ರಿಗಳು 22ರ ಮೇ 1918 ಬೆಳಗೆರೆಯಲ್ಲಿ ಜನಿಸಿದರು. ಇವರ ತಂದೆಯಾದಂತ ಶ್ರೀ ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಯೂ, ಸಂಸ್ಕೃತ ವಿದ್ವಾಂಸರು, ವೇದ ವಿದ್ಯ ಪಾರಂಗತರಾಗಿದ್ದರು ಆ ವಿದ್ಯೆಯನ್ನು ಹೊಟ್ಟೆಪಾಡಿಗೆ ಬಳಿಸಿಕೊಳ್ಳಬಾರದು! ಎಂಬ ಮನೋಭಾವದ ವಿಶಿಷ್ಠ ವ್ಯಕ್ತಿ! ಇಂಥ ಸಂಧರ್ಭದಲ್ಲಿ, ಇವರ ತಾಯಿ ಶ್ರೀಮತಿ ಅನ್ನಪೂರ್ಣಮ್ಮನವರು ಮನೆತನದ ವಿದ್ಯೆ ಆಯುರ್ವೇದದಿಂದ ಮನೆವೈದ್ಯ ಮಾಡಿ ಇಡಿ ಮನೆಯ ನಿರ್ವಹಣೆಯನ್ನು ನಿಭಾಯಿಸಿದರು. ಕ್ಷೀರಸಾಗರ ಕಾವ್ಯನಾಮ ಖ್ಯಾತಿಯ ನಾಟಕಕಾರ ಹಾಗು ಗಣಿತ ಪ್ರಾಧ್ಯಾಪಕರಾದ ಸೀತಾರಾಮ ಶಾಸ್ತ್ರಿಗಳು ಇವರ ಹಿರಿಯ ಸಹೊದರರು. ನವೋದಯ ಸಾಹಿತ್ಯದ ಪ್ರಥಮ ಕವಿಯತ್ರಿಯೆಂದೆ ಖ್ಯಾತರಾದ ಬೆಳಗೆರೆ ಜಾನಕಮ್ಮ ಹಿರಿಯ ಸಹೊದರಿ ಹಾಗು ಮತ್ತೋರ್ವ ಕತೆಗಾರ್ತಿಯಾದಂತ ಬೆಳಗೆರೆ ಪಾರ್ವತಮ್ಮನವರು ಇವರ ಕಿರಿಯ ಸಹೊದರಿ. ಹೀಗೆ ಸಾಹಿತ್ಯಿಕ ಕುಟುಂಬದಿಂದ ಬಂದ ಕೃಷ್ಣಶಾಸ್ತ್ರಿಗಳು, ಸಹಜವಾಗಿಯೇ ಸಾಹಿತ್ಯದೆಡೆಗೆ ಆಕರ್ಷಿತರಾದರ ಕೃಷ್ಣಶಾಸ್ತ್ರಿಗಳು ಮುಂದೆ ಹಲವಾರು ಅಪರೂಪದ ಕೃತಿಗಳನ್ನು ಸಾರಸತ್ವಲೋಕಕ್ಕೆ ಅರ್ಪಸಿದರು.'ತುಂಬಿ' ಇವರ ಪ್ರಥಮ ಕವನ ಸಂಕಲನವೆನ್ನ ಬಹುದು. ಇವರು ಬರೆದ ನಾಟಕಗಳೆಂದರೆ ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಆಕಸ್ಮಿಕ, ಪಾಶುಪತಾಸ್ತ್ರ, ಏಕಲವ್ಯ, ಸೋಹ್ರಾಬ್ - ರುಸ್ತುಂ, ತೆನಾಲಿ ರಾಮ, ವಿಚಿತ್ರ ಸಾಮ್ರಾಜ್ಯಂ, ಅಲ್ಲಾವುದ್ದೀನ್, ಹಿಂಗೂ ಮಾಡಿ ನೋಡ್ರೀ. ಆಕಾಶದಗಲ ನಗುವಿನ ಅವಧೂತ, ಸಾಹಿಗಳ ಸ್ಮೃತಿ (ಬೇಂದ್ರ, ವಿ.ಸೀ.,ಡಿ.ವಿ.ಜಿ.,ದೇವುಡು ಅವರೊಂದಿಗಿನ ನೆನಪುಗಳು), ಮರೆಯಾಲಾದೀತ್ತೇ?, ಎಲೆ ಮರೆಯ ಆಲರು (ನಿರೂಪಣೆ: ನ.ರವಿಕುಮಾರ್) ಇವರ ಕೃತಿಗಳು . ಡಬ್ಲ್ಯ.ಸಿ.ಸ್ಯಾಂಡರ್ಸ್ರ 'ಇನ್ನರ್ ವಾಯ್ಸ್' ಕೃತಿಯನ್ನು 'ಅಂತರ್ ಧ್ವನಿ'ಯಾಗಿ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ.


ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೈಸ್ಕೂಲ್ ಓದುತ್ತಿರುವಾಗ ಮಹಾತ್ಮ ಗಾಂಧಿಯವರ ಗಾಢಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ ಚಳುವಳಿಯಲ್ಲಿಯೂ ಭಾಗವಹಿಸಿದರು. 1926 ರಲ್ಲಿ ಗಾಂಧಿಜಿಯವರು ಮೈಸೂರು ಸಂಸ್ಥಾನದ ಅತಿಥಿಯಾಗಿ ಬಂದಾಗ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗಾಂಧಿವಾದದ ಅಪ್ಪಟ ಅಭಿಮಾನಿಯಾದ ಇವರು ಸಂಕಲ್ಪದಂತೆ ಇಂದಿಗೂ ಖಾದಿಧಾರಿಯಾಗಿಯೆ ಉಳಿದಿದ್ದಾರೆ. ಆಚಾರ್ಯ ವಿನೋಬಾ ಅವರ ಭೂದಾನ ಚಳುವಳಿಯಲ್ಲಿಯೂ ಭಾಗವಹಿಸಿದ್ದಾರೆ.
ಮೈಸೂರುನಲ್ಲಿ ಬಿ.ಇಡಿ. ಪದವಿಯನ್ನು ಮುಗಿಸಿದ ನಂತರ ಹೆಗ್ಗೆರೆ, ಮೀರಾಸಾಬಿಹಳ್ಳಿ, ದೇವನೂರು, ಚಿತ್ರದುರ್ಗ,ಕಳಸಾ ಮುಂತಾದ ಕಡೆಗಳಲ್ಲಿ ಉಪಾದ್ಯಾಯ ವೃತ್ತಿಯನ್ನು ನಿರ್ವಹಿಸಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ, ಹೆಗ್ಗೆರೆ ಗ್ರಾಮಗಳಲ್ಲಿ ಸ್ಥಳಿಯ ಸಂಘನೆಯಿಂದ ಸರ್ಕಾರದ ನೆರವಿಲ್ಲದೆ ಶಾಲಾ ಕಟ್ಟಡ, ಆಸ್ಪತ್ರೆ, ಬಯಲು ರಂಗಮಂದಿರ, ಶಿವಾಲಯ, ಶಿಕ್ಷಕರ ವಸತಿ ಗೃಹ, ರಸ್ತೆಗಳ ನಿರ್ಮಾಣ ಇವೆಲ್ಲವೂ ಇವರ ಸಾಮಾಜಿಕ ಸೇವೆಗೆ ಸಾಕ್ಷಿ .


ಸಣ್ಣವಯಸಿನಲ್ಲಿಯೇ ಗರ್ಭಿಣಿ ಪತ್ನಿ ಹಾಗು ಮಗುನನ್ನು ಕಳೆದುಕೊಂಡ ಇವರು ಸಹಜವಾಗಿಯೆ ಆಧ್ಯಾತ್ಮದೆಡೆಗೆ ಆಕರ್ಷಿತರಾದರು. ಎರಡನೇ ಮದುವೆಯಾಗಲು ಇವರ ಸಹೊದರಿಯಾದ ಪಾರ್ವತಮ್ಮನವರ ಒತ್ತಡ ತಾಳಲಾರೆದೆ ತಮ್ಮ ಎಲ್ಲಾ ಹಲ್ಲುಗಳನ್ನು ಕೀಳಿಸಿಕೊಂಡು ಬಂದಿದ್ದರಂತೆ! ತಿರುವಣ್ಣಾಮಲೈನ ಶ್ರೀ ರಮಣ ಮಹರ್ಷಿಗಳ ದಿವ್ಯ ಸನ್ನಿಧಿಯಲ್ಲಿ ಬಹುದಿನದ ಕ್ಲೇಷ ಕಳೆದು ಒಂದು ಬಗೆಯ ಅಲೌಕಿಕ ಅನುಭಾವಕ್ಕೆ ಒಳಗಾದರು. ಆಶ್ರಮದಲ್ಲೆ ಕೆಲ ಕಾಲವಿದ್ದು ಆಧ್ಯಾತ್ಮಿಕ ಸಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಆನಂದ ಆಶ್ರಮದ ಶ್ರೀ ರಾಮದಾಸರು, ಹೃಷಿಕೇಶದ ಸ್ವಾಮಿ ಶಿವಾನಂದರು, ಬಾಗೂರಿನ ಶ್ರೀ ಶರಣಮ್ಮ , ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು (ತಿರುಕ), ಶ್ರೀ ಜಿಡ್ಡು ಕೃಷ್ಣಮೂರ್ತಿ ಮೊದಲಾದ ಸತ್ಪರುಷರೊಂದಿಗೆ ಒಡನಾಟವಿಟ್ಟು ಕೊಂಡಿದ್ದರು. ಸಿದ್ಧಪುರುಷರು, ಅವಧೂತರು ಆದಂತ ಶ್ರೀ ಮುಕೂಂದೂರು ಸ್ವಾಮಿಗಳೊಂದಿಗೆ ಇದ್ದ ಇವರ ಒಡನಾಟಕ್ಕೆ ಅಕ್ಷರ ರೂಪು ಕೊಟ್ಟು ಯೆಗ್ದಾಗೆಲ್ಲಾ ಐತೆ ಕೃತಿರೂಪದಲ್ಲಿ ಹೊರ ತಂದಿರುತ್ತಾರೆ. ಈ ಕೃತಿಯು ಹಿಂದಿ, ಇಂಗ್ಲೀಷ್, ತೆಲಗು, ಮರಾಠಿ ಭಾಷೆಗಳಲ್ಲಿ ಅನುವಾದಗೊಂಡಿದೆ. ಪ್ರಸ್ತುತ ಸಂಸ್ಕೃತ, ಮಲೆಯಾಳಿ, ಬಂಗಾಳಿ, ತಮಿಳು, ಒರಿಯಾ, ಭಾಷೆಗಳಲ್ಲಿ ಅನುವಾದಕ್ಕೆ ಅಣಿಯಾಗುತ್ತಿದೆ
. ನಾಡಿನ ಜಾನಪದ ಕ್ಷೇತ್ರಕ್ಕೆ ಇವರ ಸೇವ ಅಪಾರ. ಜಾನಪದ ಕಂಪ್ಯೂಟರ್, ನಾಡೋಜಾ ಹಾಗು ರಾಜ್ಯೋತ್ಸವ ಪ್ರಶಸ್ತಿ ವಿಜೇತ ' ಜನಪದ ಸಿರಿ' ಸಿರಿಯಜ್ಜಿಯನ್ನು ಪರಿಚಯಿಸಿದ ಹಿರಿಮೆ ಇವರದು. ಟಿಮೇಟಿ ಕ್ರಿಸ್ಟೋಫರ್ , ಕೆ.ಹಿಲ್. ಫೀಟರ್ ಜೆ.ಕ್ಲಾವುಸ್, ಆಂಡ್ರೂಸ್ ಮುಂತಾದವರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣಶಾಸ್ತ್ರಿಗಳು ನೆರವಾಗಿದ್ದಾರೆ. ದೇಶಿಯ ಸಂಶೋಧಕರಾದ ಸನ್ಮಾನ್ಯ ಡಾ.ತಿ.ನಂ.ಶಂಕರನಾರಯಣ, ಢಾ.ಆರ್.ಶೇಷ ಶಾಸ್ತ್ರಿ, ಡಾ.ಕೃಷ್ಣಮೂರ್ತಿ ಹನೂರು, ಡಾ.ಎಂ.ಜಿ.ಈಶ್ವರಪ್ಪ ಮೊದಲಾದ ಜಾನಪದ ಸಂಶೋಧನೆಗೆ ಇವರಿದ್ದ ಕುಟೀರವೇ ಸ್ಪೂರ್ತಿಯ ನೆಲೆಯಾಗಿದೆ. ಜಾನಪದ ಜಂಗಮ ಡಾ.ಎಸ್.ಕೆ.ಕರೀಂಖಾನ್ ಅವರನ್ನು ಬೆಳಗೆರೆ ನಾರಯಣಪುರದಲ್ಲಿ ಗ್ರಾಮಸ್ಥರವತಿಯಿಂದ ಸನ್ಮಾನಿಸಿದ್ದಾರೆ.ಹಳ್ಳಿಚಿತ್ರ ನಾಟಕಕ್ಕೆ - ಶ್ರೇಷ್ಟ ನಾಟಕ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಟಕ ಪುರಸ್ಕಾರ. ಮೈಸೂರು ರಾಜ್ಯ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1970), ಕೇಂದ್ರ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1971), ಚಿತ್ರದುರ್ಗದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸೇವಾರತ್ನ ಪ್ರಶಸ್ತಿ. ಚಿಕ್ಕಮಗಳೂರಿನ ಅಳಾಸಿಂಗಚಾರ್ ಪ್ರಶಸ್ತಿ. 1996ರಲ್ಲಿ ನಡೆದ ಚಿತ್ರದುರ್ಗ ಜಿಲ್ಲ ಸಾಹಿತ್ಯ ಸಮ್ಮೇಳನದ ಅಧ್ಕ್ಷತೆಯನ್ನೂ ವಹಿಸಿದ್ದಾರೆ.ಚಿತ್ರದುರ್ಗದ ಅಭಿಮಾನಿಗಳು ಚಿನ್ಮಯಿ ಎಂಬ ಸಂಭಾವನ ಗ್ರಂಥವನ್ನು ಅರ್ಪಸಿದ್ದಾರೆ. ಅರ್ಪಣೆ - ಚಿಕ್ಕಮಗಳೂರಿನ ಅಭಿಮಾನಿಗಳು ಅರ್ಪಸಿದ ಸಂಭಾವಾನ ಗ್ರಂಥ.
ಬಬಬಬಬೆಳಗೆರೆ ಕೃಷ್ಣಶಾಸ್ತ್ರಿಗಳ ತಂದೆಯಾದ ಶ್ರೀ ಚಂದ್ರಶೇಖರ ಶಾಸ್ತ್ರಿಗಳವರ ಆಶಯದಂತೆ ಹಾಗು ಅಣ್ಣ ಸೀತಾರಾಮಶಾಸ್ತ್ರಿಗಳವರ ಆರ್ಥಿಕ ಸಹಕಾರದಿಂದ 1967ರಲ್ಲಿ , ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಂತ ಮನೆಯಲ್ಲಿಯೇ ಶ್ರೀ ಶಾರದ ಮಂದಿರವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದರು. ಗ್ರಾಮೀಣ ಅಲಕ್ಷಿತ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರದ ಯಾವುದೇ ನೆರವಿಲ್ಲದೇ ಆರಂಭಗೊಂಡ ಈ ಸಂಸ್ಥೆ ಇಂದಿಗೂ 750 ವಿದ್ಯಾರ್ಥಗಳಿಗೆ ಯಾವುದೆ ರೀತಿಯ ಸೇವಾ ಶುಲ್ಕವಿಲ್ಲದೆ ಉಚಿತ ವಿದ್ಯೆ,ಉಚಿತ ಊಟ , ಉಚಿತ ವಸತಿ ಕಲ್ಪಸಿಕೊಡಲಾಗುತ್ತಿದೆ. ಇಂದು ಶಿಕ್ಷಣ ವ್ಯವಸ್ಥೆ ಒಂದು ಉದ್ಯಮವಾಗಿರುವಾಗ, ಬೆಳಗೆರೆ ಕೃಷ್ಣಶಾಸ್ತ್ರಿಗಳು ಏಕವ್ಯಕ್ತಿ ಸಂಸ್ಥೆಯಾಗಿ ಯಾವುಧೇ ರೀತಿಯ ಫಲಾಪೇಕ್ಷೆಯಿಲ್ಲದೆ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ಎರಡು ಬಾರಿ ಹೃದಯಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎಂದು ಬತ್ತದ ಚೈತನ್ಯದ ಚಿಲುಮೆಯ ಈ ಶಾಸ್ತ್ರಿಗಳು! ಆದರ್ಶಯುತವಾಗಿ ಬದುಕಿದವರು ಬಹಳಷ್ಟು ಮಂದಿ ಬದುಕೇ ಆದರ್ಶವಾಗಿಸಿಕೊಂಡವರು ವಿರಳ ಅಂತಹರ ಸಾಲಿಗೆ ಈ ಬಿಳಿಯ ಬಟ್ಟೆಯ ಜಂಗಮ ಸೇರುತ್ತಾರೆ. ಇಂತಹ ಶಾಸ್ತ್ರಿಗಳಿಗೆ ಕೊನೆಗೂ ಡಾಕ್ಟರೇಟ್ ಗೌರವ ದಕ್ಕಿದೆ. ಪ್ರಶಸ್ತಿ-ಪುರಸ್ಕಾರಗಳೇನಿದ್ದರು ನಮ್ಮ ಮುಚ್ಚಟೆಯೇ ಹೊರತು ಈ ನಿರ್ಮೋಹಿ ಸಂತನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಈ ಮಹಾನ್ ಚೇತನಕ್ಕೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ ಕರುಣಿಸಲಿ ,ಇದೇ ಅವರೆಲ್ಲ ಅಭಿಮಾನಿಗಳ ಹಾರೈಕೆ.